News and Events
ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತಮಿಳುನಾಡಿನ ದಿನೇಶ್ ಬಾಲಸುಬ್ರಹ್ಮಣ್ಯ ಇವರಿಂದ ಬ್ರೋಂಕೋಸ್ಕೋಪಿ ಯಂತ್ರ ಕೊಡುಗೆ
ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ದರ್ಶನಕ್ಕೆ ಬಂದ ಸಂದರ್ಭದಲ್ಲಿ ವೈದ್ಯಕೀಯ ಸೇವೆ ಪಡೆಯಲು ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಮಿಳುನಾಡಿನ ಸೇಲಂ ಇಲ್ಲಿನ ದಿನೇಶ್ ಬಾಲಸುಬ್ರಹ್ಮಣ್ಯ ಇವರು ಈ ಆಸ್ಪತ್ರೆಯ ಅತ್ಯುತ್ತಮ ವೈದ್ಯಕೀಯ ಸೇವೆ ಮತ್ತು ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಸ್ಪತ್ರೆಯ ಸೇವೆಯಿಂದ ತೃಪ್ತರಾದ ಇವರು ಆಸ್ಪತ್ರೆಗೆ 5.85 ಲಕ್ಷ ರೂಪಾಯಿ ಮೌಲ್ಯದ ಬ್ರೋಂಕೊಸ್ಕೋಪಿ ಯಂತ್ರವನ್ನು ಕೊಡುಗೆಯಾಗಿ ನೀಡಿದರು.
ದಿನೇಶ್ ಬಾಲಸುಬ್ರಹ್ಮಣ್ಯ ಇವರು ಮೇ. 5ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಈ ಯಂತ್ರವನ್ನು ಹಸ್ತಾಂತರಿಸಿದರು. ಪೂಜ್ಯರು ಇವರ ಕೊಡುಗೆಯನ್ನು ಸ್ವೀಕರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಬಾಲಸುಬ್ರಹ್ಮಣ್ಯ ಇವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸೇವೆ ನನಗೆ ಅತ್ಯಂತ ತೃಪ್ತಿ ನೀಡಿದ್ದು, ಆದಿನವೇ ಈ ಆಸ್ಪತೆಗೆ ಏನಾದರೂ ಕೊಡುಗೆ ನೀಡಬೇಕೆಂದು ನಿರ್ಧರಿಸಿ ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಇವರಲ್ಲಿ ತಿಳಿಸಿದ್ದೆ. ಪ್ರತಿ ವರ್ಷ ಪೂಜ್ಯರು ಈ ಆಸ್ಪತ್ರೆಯಲ್ಲಿ 5 ಕೋಟಿಗೂ ಅಧಿಕ ಮೊತ್ತದ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದು, ಇದರಲ್ಲಿ ಸರಿಸುಮಾರು 1.5 ಕೋಟಿ ರೂಪಾಯಿಯನ್ನು ಉಚಿತ ಡಯಾಲಿಸಿಸ್ ಸೇವೆಗಾಗಿ ವಿನಿಯೋಗಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದರು. ಯಾವುದೇ ಕೊಡುಗೆ ಬೇಡ ನಿಮ್ಮಂತವರ ಮೆಚ್ಚುಗೆಯ ನುಡಿ ಮತ್ತು ಸಂತೃಪ್ತಿಯೇ ನಮಗೆ ಸ್ಫೂರ್ತಿ ಎಂದು ಅವರು ಹೇಳಿದ್ದರೂ ನನ್ನ ಮನಸ್ಸಿನಲ್ಲಿ ಆಸ್ಪತ್ರೆಗೆ ಉಪಯೋಗವಾಗುವ ಬ್ರೋಂಕೊಸ್ಕೋಪಿ ಯಂತ್ರವನ್ನು ಕೊಡುಗೆಯಾಗಿ ನೀಡಲೇಬೇಕು ಎಂದು ಬಯಸಿದ್ದೆ. ಪೂಜ್ಯರ ಮಾರ್ಗದರ್ಶನದಲ್ಲಿ ನಡೆಯುವ ಎಲ್ಲಾ ಸಂಸ್ಥೆಗಳು ಜನಪರ ಕಾರ್ಯ ಮಾಡುತ್ತಿದ್ದು, ಈ ಆಸ್ಪತ್ರೆಯ ವೈದ್ಯಕೀಯ ಸೇವೆ ಅತ್ಯಂತ ಉತ್ತಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀಮತಿ ಶ್ರದ್ಧಾ ಅಮಿತ್ಕುಮಾರ್, ಶ್ರೀಮತಿ ಶುೃತ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ದಿನೇಶ್ ಬಾಲಸುಬ್ರಹ್ಮಣ್ಯ ಸಹೋದರ ಸುಸಿನ್ ಜೆ ದಂಪತಿಗಳು, ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ಶೆರ್ಲಿ, ಪರ್ಚೇಸ್ ಮೆನೇಜರ್ ಅಜಯ್ ಕುಮಾರ್ ಪಿ.ಕೆ, ಮಾರ್ಕೆಟಿಂಗ್ ಎಕ್ಷ್ಕ್ಯೂಟಿವ್ ಸುಮಂತ್ ರೈ ಉಪಸ್ಥಿತರಿದ್ದರು.










